ಯಾವುದೇ ಪ್ರಕರಣಗಳ ಆರೋಪಿಗಳಿಗೆ ಕಿರುಕುಳ ನೀಡಲು ಕಾನೂನನ್ನು ಸಾಧನವಾಗಿ ಬಳಸಬಾರದು. ಕ್ಷುಲ್ಲಕ ಪ್ರಕರಣಗಳ ಕಾರಣದಿಂದ ಕಾನೂನಿನ ಪಾವಿತ್ರ್ಯ ‘ವಿಕೃತಗೊಳ್ಳಲು’ ಕೋರ್ಟ್ಗಳು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಬ್ಬರು ವ್ಯಕ್ತಿಗಳ ವಿರುದ್ಧ ಚೆನ್ನೈ ಕೋರ್ಟ್ವೊಂದರಲ್ಲಿ ಬಾಕಿಯಿರುವ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಾನೂನು ಮುಗ್ಧರನ್ನು ರಕ್ಷಿಸಲು ಇರುವ ಸಾಧನವೇ ಹೊರತು ಅವರನ್ನು ಹೆದರಿಸುವ ಖಡ್ಗವಾಗಿ ಅದನ್ನು ಪ್ರಯೋಗಿಸಬಾರದು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್.ಆರ್. ಭಟ್ ಇದ್ದ ನ್ಯಾಯಪೀಠ ಹೇಳಿದೆ. 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದಾಖಲಾಗಿದ್ದ ದೂರೊಂದನ್ನು ವಜಾ ಮಾಡುವಂತೆ ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈ ಕೋರ್ಟ್ ವಜಾ ಮಾಡಿತ್ತು. ಅದರ ವಿರುದ್ಧ ಸಂತ್ರಸ್ತರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.