ವಿವೇಕವಾರ್ತೆ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಇನ್ನು 40 ದಿನಗಳ ಅವಧಿಯಲ್ಲಿ ಬರೋಬ್ಬರಿ 1.03 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಆಗಸ್ಟ್ 17ರಿಂದ ಸೆಪ್ಟೆಂಬರ್ 25ರ ತನಕ ಯಲ್ಲಮ್ಮ ದೇವಾಲಯದ ಹುಂಡಿಯಲ್ಲಿ ಹಾಕಿರುವ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳ ಎಣಿಕೆ ಕಾರ್ಯ ನಡೆಯಿತು.
ಎರಡು ಹಂತದಲ್ಲಿ ಎಣಿಕೆ ಕಾರ್ಯ ನಡೆಯಿತು. ಸೆಪ್ಟೆಂಬರ್ 27ರಂದು ಮೊದಲ ಹಂತದ ಎಣಿಕೆ ನಡೆದಿತ್ತು. ನಿನ್ನೆಗೆ ಎರಡನೇ ಹಂತದ ಎಣಿಕೆ ಮುಕ್ತಾಯಗೊಂಡಿದ್ದು, ಒಟ್ಟು 1.03 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ ಆಗಿದೆ. ಈ ಪೈಕಿ 93,64,260 ರೂಪಾಯಿ ನಗದು, 7,50,600 ರೂ. ಮೌಲ್ಯದ ಚಿನ್ನಾಭರಣ ಮತ್ತು 1,87,860 ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿವೆ ಎಂದು ತಿಳಿದುಬಂದಿದೆ.
ಈ ಕಾಣಿಕೆ ಹಣವನ್ನು ಯಲ್ಲಮ್ಮನ ಗುಡ್ಡಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳಾದ ನೀರು, ಸ್ವಚ್ಛತೆ, ರಸ್ತೆ, ನೆರಳಿನ ವ್ಯವಸ್ಥೆ ಮತ್ತು ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಬಳಸುತ್ತೇವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಅವರು ಮಾಹಿತಿ ನೀಡಿದರು.
2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯೂ ರದ್ದಾಗಿದ್ದು, ಅವುಗಳನ್ನು ಬ್ಯಾಂಕ್ಗೆ ಹಾಜರುಪಡಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಆದರೆ, ಈಗಲೂ ಹಲವು ಭಕ್ತರು ನೋಟುಗಳನ್ನು ಹುಂಡಿಯಲ್ಲಿ ಹಾಕುತ್ತಿದ್ದಾರೆ. ಈ ಬಾರಿ ಹುಂಡಿ ಎಣಿಕೆಯಲ್ಲೂ ಆ ನೋಟುಗಳು ಸಿಕ್ಕಿವೆ. ಹಾಗಾಗಿ ಚಲಾವಣೆಯಲ್ಲಿರುವ ನೋಟುಗಳನ್ನಷ್ಟೇ ಹಾಕುವಂತೆ ಭಕ್ತರಲ್ಲಿ ಮನವಿ ಮಾಡಿಕೊಂಡರು.