ಲಕ್ನೋ: ನೋಯ್ಡಾದಲ್ಲಿ (Noida) ಕಾರೊಂದರಲ್ಲಿ 2 ಕೋಟಿಗೂ ಹೆಚ್ಚು ಹಣವನ್ನು ಸಾಗಿಸುತ್ತಿದ್ದ ಹಿನ್ನೆಲೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಹಣವನ್ನು ವಶಪಡೆಸಿಕೊಂಡಿದ್ದಾರೆ.
ನಗದು ಹವಾಲಾ ದಂಧೆಯದ್ದಾಗಿರಬಹುದು (Hawala Business) ಎಂದು ಶಂಕಿಸಲಾಗಿದ್ದು, ವಶಕ್ಕೆ ಪಡೆದ ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಅಹಮದಾಬಾದ್ನ ಜಯಂತಿ ಭಾಯ್, ದೆಹಲಿಯ ಸಂದೀಪ್ ಶರ್ಮಾ, ದೆಹಲಿಯ ವಿನಯ್ ಕುಮಾರ್, ವಾಯುವ್ಯ ಬಂಗಾಳದ ಅಭಿಜೀತ್ ಹಜ್ರಾ, ನೋಯ್ಡಾ ಸೆಕ್ಟರ್ -56 ರ ರೋಹಿತ್ ಜೈನ್, ದೆಹಲಿಯ ವಿಪುಲ್, ಮುಂಬೈನ ಮಿನೇಶ್ ಶಾ ಮತ್ತು ಇಂದೋರ್ನ ಅನುಜ್ ಎಂದು ಗುರುತಿಸಲಾಗಿದೆ.
ಪೊಲೀಸರು ಹಣ ವಶಪಡಿಸಿಕೊಳ್ಳುತ್ತಿದ್ದಂತೆಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹವಾಲಾ ದಂಧೆಗೆ 2 ಕೋಟಿ ರೂ. ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗುತ್ತಿದ್ದು, ಇದೀಗ ಬಂಧಿತರೆಲ್ಲರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹವಾಲಾ ದಂಧೆ ನಡೆಸುತ್ತಿರುವ ಕೆಲವರು ಸೆಕ್ಟರ್-55ರಲ್ಲಿ ಡೀಲ್ ಮಾಡಲು ಬರುತ್ತಿದ್ದಾರೆ. ಇವರ ಬಳಿ ಸಾಕಷ್ಟು ಹಣವಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರ ತಂಡ ಕಾರನ್ನು ಅಡ್ಡಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.