ವಿವೇಕ ವಾರ್ತೆ : ಜೇವರ್ಗಿಯ ಕಾಂಗ್ರೆಸ್ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರ ನಿವಾಸದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದೇವೀಂದ್ರ (32) ಎಂಬಾತ ಶಾಸಕ ಡಾ ಅಜಯ್ ಸಿಂಗ್ ನಿವಾಸದ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈತ ಅಜಯ್ ಸಿಂಗ್ ಅವರ ನಿವಾಸದಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಬುಧವಾರ ರಾತ್ರಿವರೆಗೂ ಕೆಲಸ ಮಾಡುತ್ತಿದ್ದ ಆತ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ದೇವೀಂದ್ರನಿಗೆ ಐದು ವರ್ಷದ ಹಿಂದೆ ವಿವಾಹವಾಗಿದ್ದು, ಆತನ ಪತ್ನಿ ಹೆರಿಗೆಯ ಸಮಯದಲ್ಲಿ ಮೃತಪಟ್ಟಿದ್ದರು. ಮಗು ಕೂಡಾ ಬದುಕುಳಿಯಲಿಲ್ಲ. ಇನ್ನೂ ಈತ ಹೆಚ್ಚಾಗಿ ಕಲಬುರಗಿಯಲ್ಲೇ ಇದ್ದ. ಏನಾದರೂ ಕೆಲಸವಿದ್ದರೆ ಮಾತ್ರ ಊರಿಗೆ ಹೋಗುತ್ತಿದ್ದ. ಕಳೆದ ಒಂದೆರಡು ವರ್ಷದಿಂದ ಆತನಿಗೆ ಮದುವೆ ಮಾಡಲೆಂದು ಹುಡುಗಿ ನೋಡುತ್ತಿದ್ದರು ಎಂದು ತಿಳಿದುಬಂದಿದೆ.
ದೇವೀಂದ್ರನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಗೊತ್ತಾಗುತ್ತಿಲ್ಲ ಎಂದು ಆತನ ಸಹೋದರಿ ಹೇಳಿದ್ದಾರೆ. ಪೊಲೀಸರು ಸಾವಿನ ಹಿಂದೆ ಬೇರೇನಾದರೂ ಕಾರಣಗಳಿವೆಯೇ ಎಂದು ಹುಡುಕುತ್ತಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.