ವಿವೇಕವಾರ್ತೆ – ದುಶ್ಚಟಗಳನ್ನು ತಮ್ಮ ಮಹಾಂತ ಜೋಳಿಗೆಗೆ ಹಾಕಲು ಪ್ರೇರೇಪಿಸುವ ಮೂಲಕ ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸಿದವರು ಇಳಕಲ್ಲ ಡಾ. ಮಹಾಂತ ಶಿವಯೋಗಿಗಳು. ಹೀಗಾಗಿ, ಶ್ರೀಗಳ ಜನ್ಮ ದಿನವಾದ ಆಗಸ್ಟ್ 1ರಂದು ವ್ಯಸನ ಮುಕ್ತ ದಿನವನ್ನಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ನಾಡಿನಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಆಚರಿಸಲಾಗುತ್ತದೆ.
ವಚನಗಳ ಸಾರವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು, ಬಸವತತ್ವ ಪ್ರಚಾರದ ಮೂಲಕ ಜನರಲ್ಲಿ ವೈಚಾರಿಕತೆ ಮೂಡಿಸಿದವರಲ್ಲಿ ಚಿತ್ತರಗಿ ಇಳಕಲ್ಲ ಸಂಸ್ಥಾನದ ಶ್ರೀ ವಿಜಯ ಮಹಾಂತೇಶ್ವರ ಮಠದ 19ನೇ ಪೀಠಾಧಿಪತಿ ಡಾ. ಮಹಾಂತ ಶಿವಯೋಗಿಗಳು ಅಗ್ರಗಣ್ಯರು. ಮಹಾಂತ ಜೋಳಿಗೆಯನ್ನು ಹೆಗಲಿಗೆ ಹಾಕಿಕೊಂಡು ಭಕ್ತರ ದುಶ್ಚಟಗಳ ಭಿಕ್ಷೆ ಬೇಡಿ ಸ್ವಸ್ಥ ಸಮಾಜ ನಿರ್ವಣಕ್ಕೆ ಶ್ರಮಿಸಿದ ಮಹಾನ್ ಚೇತನ ಅವರು.
ಕೇವಲ ಪುರಾಣ ಪ್ರವಚನಗಳಿಂದ ಜನರಲ್ಲಿ ಬದಲಾವಣೆ ತರುವುದು ಸುಲಭವಲ್ಲ ಎಂದು ಮನಗಂಡ ಶ್ರೀಗಳು ಹೆಗಲಿಗೆ ಜೋಳಿಗೆ ಹಾಕಿಕೊಂಡು ಊರು-ಊರು ತಿರುಗಿ ಜನರಲ್ಲಿರುವ ದುಶ್ಚಟಗಳನ್ನು ಭಿಕ್ಷೆ ಬೇಡಿ ಪಡೆಯುವ ಮೂಲಕ ವ್ಯಸನಮುಕ್ತ ಆರೋಗ್ಯವಂತ ಸಮಾಜ ನಿರ್ವಣಕ್ಕೆ ವಿನೂತನ-ವಿಶಿಷ್ಟ ಆಂದೋಲನವನ್ನೇ ಆರಂಭಿಸಿದರು. ಎರಡು ದಶಕಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರ ದುಶ್ಚಟಗಳನ್ನು ದೂರಾಗಿಸಿದರು. ಮದ್ಯದ ಬಾಟಲಿ, ಬೀಡಿ-ಸಿಗರೇಟ್, ತಂಬಾಕು, ಇಸ್ಪೀಟ್ ಎಲೆಗಳನ್ನು ಜೋಳಿಗಗೆ ಹಾಕಿಸಿಕೊಳ್ಳುತ್ತಿದ್ದರು. ಜೋಳಿಗೆಗೆ ಬಿದ್ದ ದುಶ್ಚಟದ ವಸ್ತುಗಳನ್ನೆಲ್ಲ ಸಾರ್ವಜನಿಕವಾಗಿ ಸುಟ್ಟ ನಂತರ ಮತ್ತೊಂದು ಊರಿಗೆ ಪ್ರಯಾಣಿಸುತ್ತಿದ್ದರು.
90ರ ದಶಕದಲ್ಲಿ ಯೂರೋಪ್ ಪ್ರವಾಸ ಸಂದರ್ಭದಲ್ಲಿ ಲಂಡನ್ ನಗರದ ಸಮಾರಂಭವೊಂದರಲ್ಲಿ ಆಂಗ್ಲ ಮಹಿಳೆಯೊಬ್ಬಳು ಜೋಳಿಗಗೆ ಡಾಲರ್ ಹಾಕಲು ಬಂದಾಗ, ‘ತಾಯಿ ಈ ಜೋಳಿಗೆ ಹಣ ಬೇಡುವುದಿಲ್ಲ. ಇದು ದುಶ್ಚಟಗಳನ್ನು ಮಾತ್ರ ಬೇಡುತ್ತದೆ. ಚಟಗಳು ಇದ್ದರೆ ಹಾಕಿ ಆರೋಗ್ಯ ಕಾಪಾಡಿಕೊಳ್ಳಿ’ ಎಂದರಂತೆ. ಅಂತೆಯೇ ನಾಡೋಜ ಚೆನ್ನವೀರ ಕಣವಿ ಅವರು ‘ದುಡ್ಡು ದುಗ್ಗಾಣೆಯನು ಕೇಳನು, ನಿಮ್ಮ ನೆಮ್ಮದಿಯ ಬಾಳಿಗೆ ನೀಡಿರಯ್ಯ ದುಶ್ಚಟಗಳ ತುಂಬಿಕೊಳುವೆನು ಜೋಳಿಗೆ’ ಎಂದು ತಮ್ಮ ಮಹಾಂತ ಭಿಕ್ಷೆ ಕವನದಲ್ಲಿ ಹೇಳಿದ್ದಾರೆ.
ವೀರಶೈವ ಲಿಂಗಾಯತ ಮಠದ ಸ್ವಾಮೀಜಿಯಾಗಿ ಮಹಾಂತಪ್ಪಗಳು ಸಾಕಷ್ಟು ಪ್ರಗತಿಪರ ವೈಚಾರಿಕತೆಯ ಕಾರ್ಯ ಕೈಗೊಂಡರು. ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು ನಾಗರ ಪಂಚಮಿಯನ್ನು ಹಾಲು ಕುಡಿಯುವ ಹಬ್ಬ ಎಂದು ಆಚರಿಸಲು ಕರೆ ನೀಡಿದರು. ಶರಣ ಸಂಸ್ಕೃತಿ ಮಹೋತ್ಸವ, ವಚನಗಳ ತಾಡೋಲೆಗಳ ಅಡ್ಡಪಲ್ಲಕ್ಕಿ, ಜಾತಿಭೇದ ಇಲ್ಲದ ಲಿಂಗ ದೀಕ್ಷೆ, ಸಹಪಂಕ್ತಿ ಭೋಜನ, ಮದುವೆಗೆ ಅಕ್ಷತೆಯ ಬದಲಾಗಿ ಪುಷ್ಪವೃಷ್ಟಿ ಮುಂತಾದ ವೈಚಾರಿಕ ಆಚರಣೆಗಳನ್ನು ಜಾರಿಗೆ ತಂದರು.
ಬೀದರನಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಕೇಂದ್ರದ ಮಾಜಿ ಸಚಿವ ರಾಮ ವಿಲಾಸ ಪಾಸ್ವಾನ್ ಅವರು ‘ಬಸವಣ್ಣನ ಅನುಯಾಯಿಯಗಳಾದ ಮಠಾಧೀಶರು ತಮ್ಮ ಮಠಗಳಿಗೆ ದಲಿತರನ್ನು ನೇಮಕ ಮಾಡುವ ಧೈರ್ಯ ಮಾಡಬಲ್ಲಿರಾ’ ಎಂದು ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿ ತಮ್ಮ ಪೀಠದ ಶಾಖಾ ಮಠಗಳಿಗೆ ದಲಿತರನ್ನೇ ನೇಮಕ ಮಾಡಿದರು. ತಮ್ಮ ಉತ್ತರಾಧಿಕಾರಿಯನ್ನಾಗಿ ಜಂಗಮರಲ್ಲದ ಶ್ರೀ ಗುರು ಮಹಾಂತ ಸ್ವಾಮೀಜಿ ಅವರನ್ನು ನೇಮಿಸಿದರು. ಇದಕ್ಕೆ ಅನೇಕ ಪ್ರತಿರೋಧಗಳು ಎದುರಾದರೂ ಎದೆಗುಂದದೇ ಹಿಡಿದ ಕಾರ್ಯ ಸಾಧಿಸಿ ದಿಟ್ಟತನ ಮೆರೆದವರು ಮಹಾಂತಪ್ಪಗಳು.
ತಮ್ಮ ಇಳಿವಯಸ್ಸಿನಲ್ಲಿಯೂ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದರು. ಭಕ್ತರ ಕಷ್ಟ-ಸುಖದಲ್ಲಿ ಭಾಗಿಯಾದರು. ಮಠಕ್ಕೆ ಭೇಟಿ ನೀಡುವ ಭಕ್ತರ ಜತೆ ಭೋಜನ ಮಾಡಿದರು. ತಾವೇ ಪ್ರೀತಿಯಿಂದ ಉಣಬಡಿಸಿದರು. ಭಕ್ತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಸಂತಸಪಟ್ಟರು. ವಿವಿಧ ಕಲಾ ಪ್ರಕಾರಗಳ ಕಲಾವಿದರನ್ನು ಶ್ರೀ ಮಠದಿಂದ ಗೌರವಿಸಿದರು. ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕ ದಂಪತಿಗಳಿಗೆ ಸನ್ಮಾನಿಸುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡು ಇತರರಿಗೆ ಮಾದರಿಯಾದರು.
ಇಂತಹ ಮಾತೃ ಹೃದಯಿ ಮಹಾಂತಪ್ಪಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. ಸಂಯಮ ಪ್ರಶಸ್ತಿ ಜತೆಗೆ 2008-09ನೇ ಸಾಲಿನ ರಾಷ್ಟ್ರೀಯ ಬಸವ ಶ್ರೀ ಪುರಸ್ಕಾರ ಪ್ರಶಸ್ತಿಯೂ ಒಲಿದುಬಂದಿತು. ನಾಲ್ಕು ದಶಕಗಳಿಗೂ ಅಧಿಕ ಕಾಲ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸಿದ ಶ್ರೀಗಳು 90ನೇ ಇಳಿವಯಸ್ಸಿನಲ್ಲಿ ಲಿಂಗೈಕ್ಯರಾದರು.