ಯುವತಿ ಜೊತೆ ಖುಲಂಖುಲ್ಲಾ ವಿಡಿಯೋ ಕಾಲ್..! 21 ಲಕ್ಷ ಕಳೆದುಕೊಂಡ ಪ್ರೋಫೆಸರ್…!

ಕ್ರೈಂ ಬ್ಯೂರೋ ವಿವೇಕವಾರ್ತೆ -ವಾಟ್ಸ್ಯಾಪ್‌ನಲ್ಲಿ ಪರಿಚಯವಾದ ಯುವತಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಜಾ ತೆಗೆದುಕೊಂಡ ಪ್ರೊಫೆಸರ್‌ ಒಬ್ಬರು ಈಗ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ದೂರು ನೀಡುವಂತಾಗಿದೆ.

ಧಾರವಾಡದ ಸತ್ತೂರಿನ ನಯನಾಭಿರಾಮ ಉಡುಪ ಎನ್ನುವ ಪ್ರೊಫೆಸರ್ ಹೀಗೆ ಹಣ ಕಳೆದುಕೊಂಡವರು.

ವಾಟ್ಸ್ಯಾಪ್‌ನಲ್ಲಿ ಪರಿಚಯವಾದ ಅಂಜಲಿ ಶರ್ಮಾ ಎಂಬ ಯುವತಿ ಜೊತೆ ಚಾಟ್‌ ಮಾಡುತ್ತಿದ್ದ ಇವರಿಗೆ ಯುವತಿ ವಿಡಿಯೋ ಕಾಲ್ ಮಾಡಿದ್ದು, ಈ ಸಂದರ್ಭದಲ್ಲಿ ಖಾಸಗಿ ಅಂಗಾಂಗ ತೋರಿಸುವಂತೆ ಪ್ರಚೋದಿಸಿದ್ದಾಳೆ. ಪ್ರೊಫೆಸರ್ ʼಮುಕ್ತ ಮುಕ್ತʼವಾಗುತ್ತಿದ್ದಂತೆ ಅದನ್ನು ಯುವತಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ವಿಡಿಯೋವನ್ನು ಪ್ರೊಫೆಸರ್‌ಗೆ ಕಳುಹಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ.

ನಂತರ ಯುವತಿ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಅದಾದ ಮೇಲೆ ಕೆಲ ದಿನಗಳ ಬಳಿಕ ವಿಕ್ರಮ್ ಎನ್ನುವ ಅಪರಿಚಿತ ವ್ಯಕ್ತಿ ನಾನು ಸೈಬರ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾನೆ. ʼಅಂಜಲಿ ನನಗೆ ಗೊತ್ತು, 5 ಲಕ್ಷ ಹಣ ಕೊಡಿ, ಎಲ್ಲವೂ ಬಗೆಹರಿಯುತ್ತದೆʼ ಎಂದು ಒತ್ತಡ ಹಾಕಿದ್ದಾನೆ. ಬೆದರಿದ ಪ್ರೊಫೆಸರ್‌ ಹಂತ ಹಂತವಾಗಿ ಸೈಬರ್ ವಂಚಕರಿಗೆ 21 ಲಕ್ಷ ರೂ. ಹಣವನ್ನು ಟ್ರಾನ್ಸ್‌ಫರ್‌ ಮಾಡಿದ್ದಾರೆ. ಸದ್ಯ ನಿತ್ಯವೂ ಹಣಕ್ಕೆ ಬೇಡಿಕೆ ಇಡುತ್ತಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!