ವಿವೇಕವಾರ್ತೆ : ಬೆಂಗಳೂರು ನಗರದಲ್ಲಿ ನಡೆದ ಬಿಹಾರ ಮೂಲದ ವ್ಯಕ್ತಿಯ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಸಂಪಿಗೆಹಳ್ಳಿ ಠಾಣಾ ಪೊಲೀಸರು ಮೃತನ ಎರಡನೇ ಪತ್ನಿ ಮತ್ತು ನಾದಿನಿಯನ್ನು ಬಂಧಿಸಿ ಕಂಬಿಹಿಂದೆ ತಳ್ಳಿದ್ದಾರೆ.
ಬಂಧಿತ ಆರೋಪಿಗಳು ನಜೀರ್ ಖಾಟುನ್ ಮತ್ತು ಕಾಶ್ಮೀರಿ ಎಂದು ತಿಳಿದುಬಂದಿದೆ. ಇನ್ನೂ ಶಕೀಲ್ ಅಕ್ತಾರ್ ಎಂಬಾತ ಕೊಲೆಯಾದ ದುರ್ದೈವಿ.
ಘಟನೆಯ ಹಿನ್ನೆಲೆ :
ಅಕ್ಟೋಬರ್ 9 ರಂದು ರಾತ್ರಿ ವೇಳೆ ಮಲಗಿದ್ದ ಶಕೀಲ್ ಎದೆ ಮೇಲೆ ಕುಳಿತು ಪತ್ನಿ ನಜೀರ್ ಖಾಟುನ್ ಬಲವಾಗಿ ಕತ್ತು ಹಿಸುಕಿದ್ದಾಳೆ. ಈ ವೇಳೆ ನಾದಿನಿ ಕಾಶ್ಮೀರಿ ಶಕೀಲ್ನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದಿದ್ದಳು ಎನ್ನಲಾಗಿದೆ.
ಇವರಿಬ್ಬರಿಂದ ಬಿಡಿಸಿಕೊಳ್ಳಲು ಮಂಚದಿಂದ ಕೆಳಗೆ ಬಿದ್ದರೂ ಬಿಡದ ಆರೋಪಿಗಳು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬೆಡ್ ಶೀಟ್ನಲ್ಲೇ ಶವವನ್ನು ಕಟ್ಟಿದ್ದರು. ಭಾರೀ ಮಳೆ ಹಿನ್ನೆಲೆ ಯಾರಿಗೂ ತಿಳಿಯದಂತೆ ಮಧ್ಯರಾತ್ರಿಯಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ಶವ ಸಾಗಿಸಿದ್ದಾರೆ. ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಹೊಂಡದಲ್ಲಿ ಶವವನ್ನು ಬಿಸಾಡಿ ಬಂದಿದ್ದರು.
ಎರಡು ದಿನಗಳ ನಂತರ ತಾನೇ ಠಾಣೆಗೆ ತೆರಳಿ ಪತಿ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅಕ್ಟೋಬರ್ 15 ರಂದು ಹೊಂಡದಲ್ಲಿ ಕೆಟ್ಟ ವಾಸನೆ ಬರುತ್ತಿದ್ದೆ ಎಂಬ ಮಾಹಿತಿ ತಿಳಿದುಬಂದಿದೆ.
ಅದರಂತೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಶವ ಹೊರತೆಗೆದು ತನಿಖೆ ಕೈಗೊಂಡ ಸಂಪಿಗೇಹಳ್ಳಿ ಪೊಲೀಸರು ನಜೀರ್ ಖಾಟುನ್ ಮತ್ತು ಕಾಶ್ಮೀರಿಯನ್ನು ಅರೆಸ್ಟ್ ಮಾಡಿದ್ದಾರೆ.