ವಿವೇಕವಾರ್ತೆ : ಕರ್ತವ್ಯ ನಿರತ ಮಹಿಳಾ ಪಿಎಸ್ಐ ಮೇಲೆ ದರ್ಪ ಪ್ರದರ್ಶಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕರ್ತವ್ಯ ನಿರತ ಮಹಿಳಾ ಪಿಎಸ್ಐ ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಆ ವ್ಯಕ್ತಿ ಮಹಿಳಾ ಪಿಎಸ್ಐ ಮೇಲೆ ದರ್ಪ ಪ್ರದರ್ಶಿಸಿದ್ದಾನೆ. ಈ ಹಿನ್ನಲೆಯಲ್ಲಿ ವ್ಯಕ್ತಿಯನ್ನು ಗೋವಿಂದರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯನ್ನು ಗೋವಿಂದರಾಜನಗರ ನಿವಾಸಿ ಭರತ್ ಎಂದು ಗೊತ್ತಾಗಿದೆ. ನಿನ್ನೆ ಮಂಗಳವಾರ ಸುಬ್ಬಣ್ಣ ಗಾರ್ಡನ್ ಬಳಿ ಗಸ್ತಿನಲ್ಲಿದ್ದ ಪ್ರೊಬೆಷನರಿ ಪಿಎಸ್ಐ ಅಶ್ವಿನಿ ಹಿಪ್ಪರಗಿ ಅವರ ದ್ವಿಚಕ್ರ ವಾಹನಕ್ಕೆ ತನ್ನ ಬೈಕ್ ಡಿಕ್ಕಿ ಹೊಡೆದ್ದಿದ್ದಾನೆ, ಅಷ್ಟೆ ಅಲ್ಲದೇ ಆರೋಪಿ ದರ್ಪ ಮಹಿಳಾ ಪಿಎಸ್ಐ ಮೇಲೆ ತೋರಿದ್ದ.
ವ್ಯಕ್ತಿ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕರ್ತವ್ಯ ನಿರತ ಪಿಎಸ್ಐ ಅಶ್ವಿನಿ ತಡೆದು ನಿಧಾನವಾಗಿ ಚಲಿಸುವಂತೆ ಬುದ್ಧಿವಾದ ಹೇಳಿದ್ದರು.ಇದನ್ನೇ ದೊಡ್ಡದು ಮಾಡಿದ ವ್ಯಕ್ತಿ ಪಿಎಸ್ಐ ಅಶ್ವಿನಿ ಅವರಿಗೆ ನಿಂದಿಸಿದ್ದು, ಮಾತ್ರವಲ್ಲದೇ ಅವರ ದ್ವಿಚಕ್ರ ವಾಹನವನ್ನು ಹಿಂಬಾಲಿಸಿಕೊಂಡು ಬಂದು ತನ್ನ ಬೈಕಿನಿಂದ ಡಿಕ್ಕಿ ಹೊಡೆದು, ಧಮ್ಕಿ ಬೇರೆ ಹಾಕಿದ್ದನು.
ಆರೋಪಿತ ವ್ಯಕ್ತಿ ಕರ್ತವ್ಯ ನಿರತ ಪಿಎಸ್ಐ ಬೈಕಿಗೆ ಡಿಕ್ಕಿ ಹೊಡೆದ ಹಿನ್ನಲೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದ ಪಿಎಸ್ಐ ಅಶ್ವಿನಿ ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣವೇ ಪೊಲೀಸರು ಬದಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆರೋಪಿ ನಡುವಳಿಕೆಯ ಹಿನ್ನಲೆಯಲ್ಲಿ ಆತನ ಮೇಲೆ ರೌಡಿಶೀಟ್ ತೆರೆಯಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.