ವಿವೇಕ ವಾರ್ತೆ : ಅಮವಾಸ್ಯೆ ದಿನದಂದು ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿದ ನಂತರ ಅದೇ ದಿನ ಮನೆಗೆ ತೆರಳಿ ನಗನಾಣ್ಯ ದೋಚಿ ನಿಂಬೆಹಣ್ಣು ಇಟ್ಟು ಮಾಟ ಮಾಡಿಸಿದ್ದಾರೆ ಎಂದೇಳಿ ಯಾಮಾರಿಸುತ್ತಿದ್ದ ಜ್ಯೋತಿಷಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ ಸುರೇಶ್ ಪಾಟೀಲ್ ಮೇಲೆ ಇಂದಿರಾ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಹಿಳೆ ತನ್ನ ಮಗಳಿಗೆ ಕುಣಿಗಲ್ನ ಹೆಬ್ಬೂರು ನಿವಾಸಿ ಗೋವಿಂದ ಗೌಡ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಉಂಟಾಗಿ ಮಗಳು ತವರು ಮನೆಗೆ ಬರುತ್ತಿದ್ದಳು. ಇದರಿಂದಾಗಿ ಇಂದಿರಾ ಚಿಂತೆಗೀಡಾಗಿದ್ದಳು.
ಈ ಬಗ್ಗೆ ಇಂದಿರಾ ಕೂಡ ತನ್ನ ತಾಯಿಯೊಂದಿಗೆ ದುಃಖ ತೋಡಿಕೊಂಡಿದ್ದಳು. ಸಮಸ್ಯೆಗೆ ಪರಿಹಾರವೆಂಬಂತೆ ಆಕೆಯ ತಾಯಿಯು ತನಗೆ ಜ್ಯೋತಿಷಿ ಸುರೇಶ್ ಪಾಟೀಲ್ ಪರಿಚಯವಿದ್ದು, ಅವರ ಬಳಿ ವಿಚಾರಿಸು ಎಲ್ಲವೂ ಸರಿಹೋಗಲಿದೆ ಎಂದಿದ್ದಳು.
ಅದರಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯ ಮನೆಗೆ ಬಂದ ಜ್ಯೋತಿಷಿ ಎಲ್ಲವನ್ನೂ ಗಮನಿಸಿದ್ದಾನೆ. ನಿಮ್ಮ ಮಗಳ ಜೀವನ ಸರಿಪಡಿಸುತ್ತೇನೆ, ಆದರೆ ಅಮಾವಾಸ್ಯೆ ದಿನ ಮನೆಯಲ್ಲಿ ಯಾರೂ ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಎಂದು ಹೇಳಿದ್ದಾನೆ. ಅವನ ಮಾತಿನಂತೆ ಇಂದಿರಾ ಇಂದಿರಾ ಕುಟುಂಬಸ್ಥರು ದೇವಸ್ಥಾನಕ್ಕೆ ಹೋಗಿದ್ದಾರೆ.
ಇದೇ ಸರಿಯಾದ ಸಮಯ ಅಂದುಕೊಂಡ ಆರೋಪಿ ಮನೆಗೆ ಬಂದು ಬೀರುವಿನಲ್ಲಿದ್ದ 5 ಲಕ್ಷ ರೂ. ಬೆಲೆಯ ಚಿನ್ನಾಭರಣ ದೋಚಿದ್ದ. ಬಳಿಕ ಬಿರುವಿನಲ್ಲಿ ನಿಂಬೆ ಹಣ್ಣು ಇಟ್ಟು ಎಸ್ಕೇಪ್ ಆಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆಲ ದಿನಗಳ ಬಳಿಕ ಕುಟುಂಬಸ್ಥರನ್ನು ಭೇಟಿಯಾಗಿ ಮನೆಗೆ ಬಂದು ಬೀರುವಿನ ಬಾಗಿಲು ತೆಗೆಯಲು ಹೇಳಿ ತಾನೇ ಇಟ್ಟಿದ್ದ ನಿಂಬೆಹಣ್ಣು ತೋರಿಸಿದ್ದಾನೆ. ನಿಮ್ಮ ಬೀಗರು ಮಾಟ, ಮಂತ್ರ ಮಾಡಿಸಿ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
65 ದಿನ ಟೈಮ್ ಕೊಡಿ ದೋಚಿರುವ ಒಡವೆಗಳನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಪರಾರಿಯಾಗಿದ್ದಾನೆ. ಎರಡು ತಿಂಗಳ ಬಳಿಕ ಪೋನ್ ಮಾಡಿದಾಗ, ಫೋನ್ ಸ್ಚಿಚ್ ಆಫ್ ಮಾಡಿಕೊಂಡಿದ್ದ. ಆಬಳಿಕ ಸಂಶಯಗೊಂಡ ಮಹಿಳೆ, ಯಲಹಂಕ ಪೊಲೀಸರಿಗೆ ಜ್ಯೋತಿಷಿ ವಿರುದ್ಧ ದೂರು ನೀಡಿದ್ದಾರೆ.