ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬ, ನಾಲ್ಕು ತಿಂಗಳ ತನ್ನ ಮಗುವನ್ನು ನೆಲಕ್ಕೆ ಎಸೆದು ಕೊಲೆ ಮಾಡಿದ ಘಟನೆ ನಡೆದಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಕುಡಚಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಕಾನ್ಸ್ಟೆಬಲ್ ಬಸಪ್ಪ ಬಾಳುಂಕಿ ಕೊಲೆ ಆರೋಪಿಯಾಗಿದ್ದಾನೆ. ಈತ ಗೋಕಾಕ ತಾಲ್ಲೂಕಿನ ದುರದುಂಡಿ ಗ್ರಾಮದವನು ಎಂದು ತಿಳಿದುಬಂದಿದೆ. ಸದ್ಯ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದರು.
ಬೈಕ್ ಮೇಲೆ ಮಗುವನ್ನು ಜಾತ್ರೆಗೆ ಕರೆದುಕೊಂಡು ಹೋಗದಂತೆ ಪತ್ನಿ ತಡೆದಿದ್ದರಿಂದ ಸಿಟ್ಟಿಗೆದ್ದ ಕಾನ್ಸ್ಟೇಬಲ್ ಮಗುವನ್ನು ರಸ್ತೆ ಮೇಲೆಯೇ ಜೋರಾಗಿ ಎಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಷದ ಹಿಂದೆ ಲಕ್ಷ್ಮೀ ಎಂಬುವರನ್ನು ಈತ ಮದುವೆಯಾಗಿದ್ದನು. ಇನ್ನೂ ಲಕ್ಷ್ಮೀ ಹೆರಿಗೆಗೆ ತವರಿಗೆ ಹೋಗಿದ್ದರು. ನಾಲ್ಕು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಕಳೆದ ಭಾನುವಾರ ಪತಿ, ಪತ್ನಿ ನಡುವೆ ಜಗಳದ ಭರದಲ್ಲಿ ಈ ಅವಘಡ ನಡೆದಿದೆ ಎಂದು ತಿಳಿಸಿದ್ದಾರೆ.
ತನ್ನ ಪತಿ, ಮೇಲಿಂದ ಮೇಲೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಇದನ್ನು ತಾಳದೇ ತವರು ಮನೆ ಸೇರಿದ್ದಾಗಿಯೂ ಲಕ್ಷ್ಮೀ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.