ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಮನೆಗೆ ನುಗ್ಗಿದ ಮೂವರು ದರೋಡೆಕೋರರು ನಕಲಿ ಪಿಸ್ತೂಲ್ ತೋರಿಸಿ, ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಗ್ರಾಮದ ಶಿವದೇಗುಲದ ಅಧ್ಯಕ್ಷ ಎಂ.ಭಾಸ್ಕರ್ ರಾವ್ ಮನೆಯಲ್ಲಿ ದರೋಡೆ ನಡೆದಿದೆ. 395 ಗ್ರಾಂ ಚಿನ್ನಾಭರಣ (Gold), 18 ಲಕ್ಷ ರೂ. ನಗದು (Money) ಸೇರಿದಂತೆ ಒಟ್ಟು 38.85 ಲಕ್ಷ ರೂ. ದರೋಡೆ ಮಾಡಲಾಗಿದೆ. ಭಾಸ್ಕರ್ ರಾವ್ ಹಾಗೂ ಅವರ ಪುತ್ರ ಸಾಯಿಕೃಷ್ಣ ಮೇಲೆ ಹಲ್ಲೆ ನಡೆದಿದ್ದು, ಸಣ್ಣ ಪುಟ್ಟಗಾಯಗಳಾಗಿವೆ.
ಮನೆಯಲ್ಲಿ ಮಲಗಿದ್ದ ಅಜ್ಜಿಯ ಬಂಗಾರ ಒಡವೆ ದೋಚಿ, ಮೆಲ್ಮಹಡಿಯಲ್ಲಿದ್ದವರನ್ನು ಬೆದರಿಸಿ ದರೋಡೆ ಮಾಡಲಾಗಿದೆ. ಮನೆಯಲ್ಲಿದ್ದವರು ಗಲಾಟೆ ಮಾಡಿದ್ದಕ್ಕೆ ಅಕ್ಕಪಕ್ಕದ ಜನ ಬರುವ ಆತಂಕದಲ್ಲಿ ದರೋಡೆಕೊರರು ಪರಾರಿಯಾಗಿದ್ದಾರೆ.
ಅವಸರದಲ್ಲಿ ನಕಲಿ ಪಿಸ್ತೂಲ್, ಕಬ್ಬಿಣದ ರಾಡ್ ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ತುರವಿಹಾಳ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ಪರಿಶೀಲನೆ ಮಾಡಿದ್ದಾರೆ.